ಅರಕಲಗೂಡು: ತಾಲ್ಲೂಕಿನ ಮಣಜೂರು- ದಾಸನಪುರ ಗ್ರಾಮದ ಇತಿಹಾಸ ಪ್ರಸಿದ್ದ ಬೆಟ್ಟದ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ನೆರವೇರಿತು.
ಜಾತ್ರೆಯಲ್ಲಿ ಸುತ್ತತಲಿನ ಹತ್ತಾರು ಹಳ್ಳಿಗಳ ಸಾವಿರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಹೇಮಾವತಿ ಜಲಾಶಯ ತಪ್ಪಲಿನ ಪ್ರಕೃತಿ ಮಡಿಲಲ್ಲಿ ನೂರಾರು ಅಡಿ ಎತ್ತರದಲ್ಲಿರುವ ಬೆಟ್ಟವೇರಿದ ಭಕ್ತರು ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ತಂಡೋಪ ತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು.
ದೇವಸ್ಥಾನದಲ್ಲಿ ಬೆಳಿಗ್ಗೆ ಕಲ್ಯಾಣೋತ್ಸವ ಸೇವೆ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಭಕ್ತರು ಸರದಿ ಸಾಲಿನಲ್ಲಿ ಸಾಗಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಜಾಹಿರಾತು/Advertisement
ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಪ್ರಕಾಶ್, ಸದಸ್ಯ ಎಂ.ಆರ್.ರಂಗಸ್ವಾಮಿ, ಮುಖಂಡ ಎಚ್.ಎಲ್.ವಿಶ್ವನಾಥ್, ವಕೀಲ ಎಂ.ಬಿ.ಆನಂದ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಜಾತ್ರೆಯಲ್ಲಿ ವ್ಯಾಪಾರಸ್ಥರು ಭರ್ಜರಿ ವ್ಯಾಪಾರ ನಡೆಸಿದರು. ಜನರು ಬೆಟ್ಟದ ಮೇಲೆ ನಿಂತು ಗೊರೂರು ಹೇಮಾವತಿ ಜಲಾಶಯದ ಹಿನ್ನೀರಿನ ಸೊಬಗು ಕಣ್ಣುಂಬಿಕೊಂಡರು.ರಥೋತ್ಸವ ಇಂದು: ಬೆಟ್ಟದ ರಂಗನಾಥಸ್ವಾಮಿ ರಥೋತ್ಸವವು ಮಣಜೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿದೆ. ರಾತ್ರಿ ತೆಪ್ಪೋತ್ಸವ, ಉರುಬತ್ತಿ ಸೇವೆ ನಡೆಯಲಿದೆ.
News5kannada
Ravi Dummi
Tags
ಅರಕಲಗೂಡು