ಹಾಸನ-ಅರಕಲಗೂಡು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಜಲ್ಲಿ, ಎಂ ಸ್ಯಾಂಡ್ ತುಂಬಿದ ಟಿಪ್ಪರ್ ಲಾರಿಗಳು ನಿಯಮ ಉಲ್ಲಂಘನೆ ಮಾಡುತ್ತಿರುವ ಪರಿಣಾಮ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದು ಕಂಡುಬದಿದೆ.
ಹಾಸನ ಅರಕಲಗೂಡು ಮಧ್ಯದ ಕಟ್ಟಾಯ–ಇಂದುಪುರ ಭಾಗದಲ್ಲಿ ಜೆಲ್ಲಿ ಕ್ವಾರೆಗಳು ಕಾರ್ಯ ನಿರ್ವಹಿಸುತ್ತಿವೆ. ಹತ್ತಾರು ಟಿಪ್ಪರ್ ಗಳಲ್ಲಿ ಜೆಲ್ಲಿ ಮತ್ತು ಎಂ-ಸ್ಯಾಂಡ್ ಸಾಗಾಟ ಮಾಡಲಾಗುತ್ತಿದೆ. ಆದರೆ ನಿಯಮಾನುಸಾರ ಟಾರ್ ಪಲ್ ಅಥವಾ ಇತರೆ ರಕ್ಷಣೆಯ ಮೆಸ್, ಹೊದಿಕೆ ಮುಚ್ಚಿಕೊಂಡು ಟಿಪ್ಪರ್ ಸಂಚಾರವನ್ನು ಕೈಗೊಳ್ಳದ ಪರಿಣಾಮ ಗಾಳಿಯಲ್ಲಿ ಜಲ್ಲಿ, ಎಂ ಸ್ಯಾಂಡ್ ರಸ್ತೆಯಲ್ಲಿ ಸಂಚಾರ ಮಾಡುವವರ ಮೇಲೆ ದುಸ್ಪರಿಣಾಮ ಬಿರುತ್ತಿದೆ.
ಇದಲ್ಲದೆ, ಅನೇಕ ಲಾರಿಗಳು ಅಳತೆಯನ್ನು ಮೀರಿ ಜೆಲ್ಲಿ ತುಂಬಿಕೊಂಡು ಸಾಗುತ್ತಿರುವುದರಿಂದ ಜೆಲ್ಲಿಗಳು ರಸ್ತೆಗೆ ಬಿದ್ದು, ಹಿಂದೆ ಬರುತ್ತಿರುವ ವಾಹನಗಳ ಗಾಜುಗಳು ಒಡೆಯುವ ಘಟನೆಗಳು ನಡೆಯುತ್ತಿವೆ. ರಸ್ತೆಯ ಮೇಲೆ ಬಿದ್ದಿರುವ ಜೆಲ್ಲಿಗಳಿಂದ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುವ ಅಪಾಯವೂ ಹೆಚ್ಚಾಗಿದೆ.
ಈ ಸಮಸ್ಯೆ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸದೆ ಕಣ್ಣಿದ್ದು ಕುರಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರತಿದಿನ ಈ ನರಕಯಾತನೆಯನ್ನು ರಸ್ತೆಯಲ್ಲಿ ಸಂಚರಿಸುವವರು ಅನುಭವಿಸುವಂತ್ತಾಗಿದೆ.
Tags
ಹಾಸನ